ಕೇರಳದಿಂದ ಗಡಿ ಗ್ರಾಮಗಳ ಹೆಸರು ಬದಲಾವಣೆಗೆ ಹುನ್ನಾರ!

ಬೆಂಗಳೂರು: ಕೇರಳ ಸರ್ಕಾರವು ಕನ್ನಡ ಭಾಷೆಯನ್ನೇ ಹೆಚ್ಚು ಬಳಸುವಂತಹ ಕನ್ನಡಿಗರಿರುವ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವುಳ್ಳ ನಮ್ಮ ಕರ್ನಾಟಕದ ಗಡಿ ಭಾಗದ ಕೇರಳ ರಾಜ್ಯದಲ್ಲಿರುವ ಪ್ರಖ್ಯಾತ ತಾಣಗಳಾದ ಮಂಜೇಶ್ವರ ಮತ್ತು ಕಾಸರಗೋಡಿನ ಕನ್ನಡ ಪರಂಪರೆಯನ್ನು ಸೂಚಿಸುವ ಹೆಸರುಗಳನ್ನು ಹೊಂದಿದ್ದ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸುವಂತಹ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಮಾಡುತ್ತಿರುವುದಕ್ಕೆ ಕನ್ನಡ ಪ್ರಾಧಿಕಾರವು ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಬೇಕೆಂಬ ಮನವಿ ಪತ್ರವನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಡಾ.ಸಿ.ಸೋಮಶೇಖರ ರವರು ಕರ್ನಾಟಕದ ಮುಖ್ಯ ಮಂತ್ರಿಗಳ ಕಾರ್ಯದರ್ಶಿ   ಪಿ. ರವಿಕುಮಾರ್ ಅವರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.

ಮನವಿ ಪತ್ರದಲ್ಲಿ ಏನಿದೆ?

ಮನವಿ ಪತ್ರದಲ್ಲಿ ಕೇರಳ ಸರ್ಕಾರವು ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಿ ಮಲಯಾಳಂ ಭಾಷೆಯ ಹೆಸರುಗಳನ್ನು ನೀಡಲು ಹೊರಟಿರುವುದು ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆ ತರುವಂತಾಗಿರುತ್ತದೆ. ಇಂತಹ ಬದಲಾವಣೆಗಳನ್ನು ತರಲು ಪ್ರಯತ್ನಿಸುವ ಮುನ್ನ ಆ ಭಾಗದ ಕನ್ನಡಿಗರ ಅಭಿಪ್ರಾಯವನ್ನು ಅಥವಾ ಆ ಭಾಗದ ನಾಗರಿಕರ ಅಭಿಪ್ರಾಯವನ್ನು ಕೇಳಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ತಾವು ಕೇರಳ ರಾಜ್ದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ರೀತಿ ಪರಂಪರಾಗತವಾಗಿ ಹಲವಾರು ದಶಕ ಮತ್ತು ಶತಮಾನಗಳಿಂದ ಬಂದಿರುವಂತಹ ಕೆಲವು ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಕೋರುವುದು ಸೂಕ್ತವಾಗಿದೆ ಹಾಗೂ ಇದು ನಮ್ಮ ಪ್ರಾಧಿಕಾರದ ಆಶಯವಾಗಿರುತ್ತದೆ.

ಈ ಭಾಗದ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಆ ಭಾಗದ ಕನ್ನಡಪರ ಸಂಘ ಸಂಸ್ಥೆಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುತ್ತವೆ. ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ ಈ ಬಗ್ಗೆ ಗಡಿ ಪ್ರದೇಶ ಅಭಿವೃದ್ಧಿಯ ಅಧ್ಯಕ್ಷರು ಕೇರಳ ಸರ್ಕಾರದ ಮತ್ತು ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ ಜೂನ್ 24 ರಂದು ಪತ್ರ ಬರೆದು ಕನ್ನಡ ಗ್ರಾಮಗಳ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಪತ್ರಗಳನ್ನು ಬರೆದಿರುತ್ತಾರೆ.
ಮಧೂರು, ಕಾರಡ್ಕ, ಪಿಳಿಕುಂಜೆ, ಮಂಜೇಶ್ವರ, ಕುಂಬಳೆ, ನಲ್ಲಿಕುಂಜ, ಮಲ್ಲ, ಬೇದಡ್ಕ, ಆನೆಬಾಗಿಲು, ಹೊಸದುರ್ಗ, ಸಸಿಹಿತ್ಲು, ಪ್ರಸ್ತುತ ಅಸ್ತಿತ್ವದಲ್ಲಿರುವ ಗ್ರಾಮಗಳಾಗಿದ್ದು, ಮಧುರಮ್, ಕಡಗಮ್, ಪಿಳಿಕುನ್ನು, ಮಂಜೇಶ್ವರಮ್, ಕುಂಬ್ಳಾ, ನೆಲ್ಲಿಕುನ್ನಿ, ಮಲ್ಲಮ್, ಬೆಡಗಮ್, ಆನೆವಾಗಿಲ್, ಪುದಿಯಕೋಟ, ಶೈವಲಪ್ ಇವು ಬದಲಾಯಿಸಲು ಹೊರಟಿರುವ ಮಲಯಾಳಂ  ಗ್ರಾಮಗಳ ಹೆಸರುಗಳಾಗಿವೆ.
ಹಲವಾರು ದಶಕ ಮತ್ತು ಶತಮಾನಗಳಿಂದ ಬಂದಿರುವ ಗ್ರಾಮಗಳ ಹೆಸರುಗಳನ್ನೂ ಸೂಚಿಸುವ ಕನ್ನಡ ಭಾಷಾ ಸೂಚಕ ನಾಮಫಲಕಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಹಾಗೂ ಈ ಭಾಗದ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಅಲ್ಲಿನ ಕನ್ನಡ ಪರ ಸಂಘ ಸಂಸ್ಥೆಗಳು ತಮ್ಮ ಅಸಮಾಧಾನವನ್ನು ಸಹ ವ್ಯಕ್ತಪಡಿಸಿರುವ ಅಂಶವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ.

Leave a Reply

Your email address will not be published. Required fields are marked *