ಮೈಸೂರುತಾಲೂಕು ಹೂಟಗಳ್ಳಿ ನಗರಸಭೆ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರನ್ನು ಆಹ್ವಾನಿಸದ ಶಿಷ್ಟಾಚಾರ ಉಲ್ಲಂಘಿಸಿರುವ ನಗರಸಭೆ ಆಯುಕ್ತ ನರಸಿಂಹಮೂರ್ತಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ . ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ತಾಲೂಕಿನ ಅಭಿವೃದ್ಧಿ ಹೊಂದಿದ ಗ್ರಾಮ ಪಂಚಾಯಿಗಳನ್ನು ಮೆರ್ಜೆಗೇರಿಸಿ ಬೋಗಾದಿ , ಶ್ರೀರಾಂಪುರ , ಕಡಕೊಳ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಹಾಗೂ ಹೂಟಗಳ್ಳಿ ನಗರಸಭೆಯನ್ನು ಸರ್ಕಾರ ರಚಿಸಿದ , ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈ ಕಾರ್ಯವಾಗಿದ್ದು ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ . ಸಂಸದನಾಗಿ ನಾನೂ ಕೂಡ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದೆ .

ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಮೈಸೂರಿನಲ್ಲೇ ಇದ್ದರೂ ಅವರಿಗೆ ನಗರಸಭೆ ಕಾರ್ಯಾಲಯ ಉದ್ಘಾಟನೆ ಬಗ್ಗೆ ಯಾವುದೇ ಮಾಹಿತಿ ನೀಡದೆ ಶುಕ್ರವಾರ ಕಾರ್ಯಕ್ರಮ ನಡೆಸಲಾಗಿದೆ ಇದು ಶಿಷ್ಟಾಚಾರ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದ್ದು , ನಗರಸಭೆ ಆಯುಕ್ತರಾದ ನರಸಿಂಹಮೂರ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ . ಬೆಂಗಳೂರು ನಂತರ ಮೈಸೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು , ನಗರಕ್ಕೆ ಹೊಂದಿಕೊಂಡಂತಿರುವ ಆಲನಹಳ್ಳಿ , ಹಂಚ್ಯಾ , ಕಡಕೊಳ , ರಮ್ಮನಹಳ್ಳಿ , ಹೊಸಹುಂಡಿ , ದೇವಲಾಪುರ , ಶ್ರೀರಾಂಪುರ , ಜಯಪುರ , ಬೋಗಾದಿ , ಹಿನಕಲ್ , ಕೂರ್ಗಳ್ಳಿ , ಇಲವಾಲ , ಸಿದ್ದಲಿಂಗಪುರ ಗ್ರಾಪಂಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದು , ಹಲವು ಬಡಾವಣೆ , ಕೈಗಾರಿಕೋದ್ಯಮಗಳು ಸ್ಥಾಪನೆಗೊಂಡಿವೆ . ಪರಿಣಾಮ ಗ್ರಾಪಂಗಳ ಆದಾಯವೂ ಉತ್ತಮವಾಗಿದೆ . ಹಾಗಾಗಿ ಕರ್ನಾಟಕ ಪೌರಾಡಳಿತ ಕಾಯ್ದೆಯನ್ವಯ ಈ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿ ‘ ಬೃಹತ್ ಮೈಸೂರು ‘ ರಚಿಸಿ , ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಸಂಸದ ಪ್ರತಾಪ್ ಸಿಂಹ 2020 ರ ಏಪ್ರಿಲ್ 18 ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣನವರಿಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು .