ಪರೀಕ್ಷೆ ಹಿಂಪಡೆಯುವಂತೆ ವಿಶ್ವನಾಥ್ ಆಗ್ರಹ

ಮೈಸೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ತೀರ್ಮಾನವನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ದಿನಗಳಲ್ಲಿ ಕೊರೊನಾ 3ನೇ ಅಲೆ, ಡೆಲ್ಟಾ ಪ್ಲಸ್ ಬರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೂ ಪರೀಕ್ಷೆ ಮಾಡುವ ಹಠ ಯಾಕೇ? ಎಂದು ಪ್ರಶ್ನಿಸಿದರು.
ಯುನಿಸೆಫ್ ಮಕ್ಕಳಿಗೆ ಪರೀಕ್ಷೆಗಿಂತ ಪಾಠ ಮುಖ್ಯ ಎಂದಿದೆ. ಪಾಠವೇ ಮಾಡದೇ ಪರೀಕ್ಷೆ ಮಾಡುವ ಪದ್ಧತಿ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ. ಮಕ್ಕಳ ಜೀವದ ಜತೆ ಚೆಲ್ಲಾಟವಾಡುವ ಪರೀಕ್ಷೆ ಬೇಡ. ಇದು ಸರ್ಕಾರಕ್ಕೂ ಯೋಗ್ಯವಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಜೀವನಕ್ಕಿಂತ ಜೀವ ದೊಡ್ಡದು ಎಂದಿದ್ದಾರೆ. ರಾಜ್ಯ ಸರ್ಕಾರ ಮೋದಿಯವರ ಮಾತನ್ನೂ ಕೇಳುತ್ತಿಲ್ಲ. ಮಕ್ಕಳನ್ನು ಸಾವಿಗೆ ದೂಡುವ ಪರೀಕ್ಷೆಗಳು ಬೇಕೆ? ಈ ಪರೀಕ್ಷೆಯಿಂದ ಮಕ್ಕಳು, ಪೋಷಕರು, ಶಿಕ್ಷಕರ ಜೀವನವನ್ನು ತೆಗೆದುಕೊಳ್ಳಲು ಪರೀಕ್ಷೆ ಯಾಕೇ ನಡೆಸಬೇಕು ಎಂದು ಪ್ರಶ್ನಿಸಿದರು.
ಮಕ್ಕಳ ಜೀವಕ್ಕಿಂತ ಪರೀಕ್ಷೆ ನಡೆಸುವುದೇ ಶಿಕ್ಷಣ ಸಚಿವರಿಗೆ ಮುಖ್ಯವಾಗಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೂ ಮಾಹಿತಿ ಇಲ್ಲ. ಮಾಜಿ ಶಿಕ್ಷಣ ಸಚಿವರು, ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಕೇಳದ ಶಿಕ್ಷಣ ಸಚಿವರು ನನಗೇ ಎಲ್ಲ ಗೊತ್ತಿದೆ ಎಂಬ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಂತರ ಎಷ್ಟು ಮಕ್ಕಳು ಮೃತಪಟ್ಟರು? ಮೃತಪಟ್ಟ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಲಿಲ್ಲ. ಇವತ್ತಿನ ಪರಿಸ್ಥಿತಿ ಏನಾಗಿದೆ. ಜುಲೈ 15ರ ವೇಳೆಗೆ 3ನೇ ಅಲೆ ಬರಲಿದೆ ಎಂದು ಬಿಬಿಸಿ ವರದಿ ಮಾಡಿದೆ.4 ಲಕ್ಷ ಮಕ್ಕಳಿರುವ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವಾಗ 10 ಲಕ್ಷ ಮಕ್ಕಳಿಗೆ ಪರೀಕ್ಷೆ ನಡೆಸುವ ದುಸ್ಸಾಹಸವೇಕೆ? ಕೇಂದ್ರ ಸರ್ಕಾರ ಸಿಬಿಎಸ್‌ಇ ಪಿಯು ಪರೀಕ್ಷೆ ರದ್ದು ಮಾಡಿದೆ. ಕೆಲವು ರಾಜ್ಯಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೇಡ ಎಂದಿವೆ. ಆದರೂ ರಾಜ್ಯದಲ್ಲಿ ಪರೀಕ್ಷೆö ನಡೆಸುವ ಹಠ ಎಂದರು.
ಪರೀಕ್ಷಾ ಕೊಠಡಿಗೆ ಹೋದ ಮಗು ಉತ್ತೀರ್ಣ ಮಾಡುವುದಾರೆ ಯಾವ ಪುರುಷಾರ್ಥಕ್ಕೆ ಪರೀಕ್ಷೆ ನಡೆಸಬೇಕು? 40 ಅಂಕಗಳಿಗೆ ಪರೀಕ್ಷೆ ಬರೆದ 100 ಅಂಕಗಳ ಒತ್ತಡವನ್ನು ಮಕ್ಕಳು ಹೇಗೆ ನಿಭಾಯಿಸುತ್ತಾರೆ. ಪರೀಕ್ಷೆ ಕಾರ್ಯಕ್ಕೆ ಮೂರುಪಟ್ಟು ಶಿಕ್ಷಕರನ್ನು ನೇಮಿಸುವರಂತೆ. ಅಷ್ಟು ಶಿಕ್ಷಕರು ಎಲ್ಲಿದ್ದಾರೆ?
ಹಿಂದೆ ರಾಜ್ಯದಲ್ಲಿ ಅಕ್ಷöರ ಆರೋಗ್ಯ ಧ್ಯೇಯವಾಗಿತ್ತು. ಇವತ್ತು ಎರಡೂ ಕೆಟ್ಟು ಹೋಗಿದೆ. ಖಾಸಗಿ ಶಿಕ್ಷಣ ಸಂಸ್ಥೆ, ಖಾಸಗಿ ಆಸ್ಪತ್ರೆ ಕಂಟ್ರೋಲ್ ಮಾಡಲು ಸಾಧ್ಯವಾಗದ ಸರ್ಕಾರ, ಖಾಸಗಿ ಆಡಳಿತ ಮಂಡಲಿಗೆ ತಲೆಬಾಗಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡಲಿಕ್ಕೆ ಸಾಧ್ಯವಾಗಿಲ್ಲ. ಇಡೀ ಶಿಕ್ಷಣ ವ್ಯವಸ್ಥೆ ಭಯ ಮತ್ತು ಆತಂಕದಲ್ಲಿದೆ ಎಂದು ಅಭಿಪ್ರಾಯಪಟ್ಟರು.


ಕಾಸರಗೋಡಿನ ಕನ್ನಡ ಹೆಸರು ಬದಲಾವಣೆ ಸಂಬಂಧ ಕರ್ನಾಟಕ ಸಿಎಂ, ಕೇರಳ ಸಿಎಂ ಅವರೊಂದಿಗೆ ಮಾತಾಡಬೇಕು. ಕಾಗದ ಬರೆದು ಸುಮ್ಮನೆ ಕೂರುವುದರಿಂದ ಪ್ರಯೋಜನವಿಲ್ಲ. ಫೆಬ್ರವರಿ ತಿಂಗಳಲ್ಲಿ ಮೈಸೂರು ಜಿಲ್ಲಾಧಿಕಾರಿಗಳು, 1881ರಲ್ಲಿ ಪ್ರಾರಂಭವಾದ ಎನ್‌ಟಿಎಂ ಶಾಲೆ ವಿವಾದವನ್ನು ಬೆಳೆಸುತ್ತಿರುವುದು ಸರಿಯಲ್ಲ. ಆ ಶಾಲೆಗೆ ಪಾರಂಪರಿಕ ಮಹತ್ವವಿದೆ. ಆಶ್ರಮಕ್ಕೆ ಸ್ಮಾರಕ ನಿರ್ಮಿಸಲು ಯಾಕಿಷ್ಟು ಆತುರ? ದಯಮಾಡಿ ಶಾಲೆ-ಸ್ಮಾರಕ ಎರಡೂ ಉಳಿಯಬೇಕು.


ಅಡಗೂರು ಎಚ್.ವಿಶ್ವನಾಥ್, ಎಂಎಲ್‌ಸಿ

Leave a Reply

Your email address will not be published. Required fields are marked *