ಮೈಸೂರು: ಇನ್ಮುಂದೆ ಬೆಂಗಳೂರು- ಮಂಗಳೂರು ರೈಲಿನಲ್ಲಿ ತೆರಳುವವರು ಪಶ್ಚಿಮ ಘಟ್ಟದ ಚೆಲುವನ್ನು ಸವಿಯಲೆಂದೇ ರೈಲ್ವೆ ಇಲಾಖೆ ವಿಸ್ಟಾಡೊಂ ಕೋಚ್ ವ್ಯವಸ್ಥೆ ಮಾಡಿದೆ.
ಮಾಮೂಲಿ ರೈಲಿನ ಬೋಗಿಯಲ್ಲಿ ಕುಳಿತು ಚೆಲುವನ್ನು ಕಷ್ಟವಾಗಿತ್ತು. ಆದರೆ ವಿಸ್ಟಾಡೊಂ ಕೋಚ್ ನಲ್ಲಿ ನಿಸರ್ಗವನ್ನು ಸವಿಯಲೆಂದೇ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಪ್ರಯಾಣಿಸಿ ಪಶ್ಚಿಮ ಘಟ್ಟದ ಸೌಂದರ್ಯವನ್ನು ಮನದಣಿಯುವಷ್ಟು ಸವಿಯಬಹುದಾಗಿದೆ.

ಪಶ್ಚಿಮ ಘಟ್ಟದ ಸೌಂದರ್ಯವೇ ಹಾಗೆ ಅದು ನೋಟ ಹಾಯಿಸಿದಷ್ಟು ಮುಗಿಯದ ಹಸಿರ ಗಣಿ. ಬೆಟ್ಟ ಗುಡ್ಡಗಳು ಅದರ ನಡುವೆ ಒತ್ತೊತ್ತಾಗಿ ಬೆಳೆದು ನಿಂತ ಗಿಡಮರಗಳು, ನಡುವೆ ಧುಮ್ಮಿಕ್ಕುವ ಝರಿಗಳು ಹೀಗೆ ಚೆಲುವಿನ ನೋಟ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದೆಲ್ಲವನ್ನು ರೈಲಿನಲ್ಲಿ ಕುಳಿತೇ ನೋಡಲು ವಿಸ್ಟಾಡೊಂ ಕೋಚ್ ಸಹಕಾರಿಯಾಗಿದೆ. ಇದು ಪೇಟೆ ಪಟ್ಟಣದ ಗೌಜು ಗದ್ದಲಗಳಲ್ಲಿದ್ದವರು ನಿಸರ್ಗದ ನೋಟದಿಂದ ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ವರದಾನ ಎಂದರೂ ತಪ್ಪಾಗಲಾರದು.

ನೈಋತ್ಯ ರೈಲ್ವೆ ಈ ಮಾರ್ಗದಲ್ಲಿ ಸಂಚರಿಸುವ ಮೂರು ರೈಲುಗಳಲ್ಲಿ ತಲಾ ಎರಡು ವಿಸ್ಟಾಡೋಂ ಕೋಚ್ ಅಳವಡಿಸಿದ್ದು, ಬೆಂಗಳೂರು- ಮಂಗಳೂರು ರೈಲ್ವೇ ಮಾರ್ಗದ ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವೆ ಸಿಗುವ ಪಶ್ಚಿಮಘಟ್ಟ ಪ್ರದೇಶದ 55 ಕಿ.ಮೀ ವ್ಯಾಪ್ತಿ ಹಸಿರುಮಯ ನೋಟವನ್ನು ವಿಸ್ಟಾಡೊಂ ಕೋಚ್ ನಲ್ಲಿ ಕುಳಿತು ದೊಡ್ಡದಾದ ಗಾಜಿನ ಕಿಟಿಕಿ ಮೂಲಕ ನೋಡಬಹುದು.

ಇಲ್ಲಿ 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳಿದ್ದು, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಮೊಬೈಲ್, ಪುಟ್ಟ ರೆಫ್ರಿಜೇಟರ್ಗಳು ಸೇರಿದಂತೆ ಹಲವು ರೀತಿಯ ಆಧುನಿಕ ಸೌಲಭ್ಯಗಳಿವೆ. ಒಟ್ಟಾರೆ ಪ್ರವಾಸೋದ್ಯಮಕ್ಕೆ ವಿಸ್ಟಾಡೋಂ ಕೋಚ್ ಉತ್ತೇಜನವಾಗಿರುವುದಂತು ಸತ್ಯ.