ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬುಬೆಳೆಗಾರರ ಸಂಘದಿಂದ ಗುರುವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿಶ್ವ ರೈತ ದಿನವನ್ನು ಸರಳವಾಗಿ ಆಚರಿಸಲಾಯಿತು.
ಇದೇ ವೇಳೆ ಹುಣಸೂರು ಗ್ರಾಮದ ರೈತ ಮಹಿಳೆ ಚಂದ್ರಿಕಾ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಸೀರೆ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
ನಂತರ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರ ಮಕ್ಕಳ ದಿನಾಚರಣೆ, ಕಾರ್ಮಿಕರ ದಿನಾಚರಣೆ ಸೇರಿದಂತೆ ಮಹನೀಯರ ಜಯಂತಿ ಆಚರಿಸಿ ಒಂದು ವರ್ಗದ ಜನರನ್ನು ಓಲೈಸುವ ಕೆಲಸ ಮಾಡುತ್ತಿದೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತನ ದಿನ ಆಚರಿಸುವುದನ್ನೂ ಯಾವಾಗಲು ಮರೆಯುತ್ತಿದ್ದು, ರೈತರ ಬಗೆಗಿನ ಕಾಳಜಿ, ಕಾಗದ ಪತ್ರಗಳಲ್ಲಿ ಮಾತ್ರ ಉಳಿಯುವಂತಾಗಿದೆ ಎಂದು ಬೇಸರಿಸಿದರು.
ಇತ್ತೀಚಿನ ದಿನಗಳಲ್ಲಿ ರೈತರ ದಿನ ಆಚರಿಸುತ್ತಿದ್ದರೂ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ್ದ ಸರ್ಕಾರ ರೈತರನ್ನು ನೆನೆಯುವ ಸಲುವಾಗಿ ಪ್ರತಿ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೃಷಿ ಮೇಳಗಳನ್ನು ಆೋಂಜಿಸಬೇಕು. ರೈತರ ಎಲ್ಲಾ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಶ್ವ ರೈತ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಶಿವರಾಜಪ್ಪ, ಡಾ.ಮಹದೇವಯ್ಯ, ನಿವೃತ್ತ ಪ್ರಾಂಶುಪಾಲ ಎನ್.ಎನ್.ನಾಯಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಶಿವರುದ್ರಪ್ಪ, ಚಂದ್ರಶೇಖರ್, ಮಂಜುನಾಥ್, ಬರಡನಪುರ ನಾಗರಾಜ್ ಸೇರಿದಂತೆ ಇನ್ನಿತರರು ಇದ್ದರು.