ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಯೋಧನಿಗೆ ಭವ್ಯ ಸ್ವಾಗತ

ಮೈಸೂರು: ಕಳೆದ 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಸ್ವಗ್ರಾಮಕ್ಕಾಗಮಿಸಿದ ಯೋಧ ಅನಿಲ್‌ಕುಮಾರನ್ನು ಹನಗೋಡು ಗ್ರಾಮಸ್ಥರು ಪೌರ ಸನ್ಮಾನ ನೀಡಿ, ಗೌರವಿಸಿ, ಬರಮಾಡಿಕೊಂಡರು.

ಹನಗೋಡು ಗ್ರಾಮದ ರಾಮೇಗೌಡ ಸರೋಜಮ್ಮ ದಂಪತಿಯ ಪುತ್ರ ಅನಿಲ್‌ಕುಮಾರ್ ಭೂ ಸೇನೆಯ ಫಿರಂಗಿದಳ (ಆರ್ಟಿ) ವಿಭಾಗದಲ್ಲಿ ಸೈನಿಕನಾಗಿ ಸೇವೆಗೆ ಸೇರಿ ದೇಶದ ವಿವಿಧೆಡೆ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಜೂ.30ರಂದು ನಿವೃತ್ತರಾಗಿ ಜು.4ರಂದು ಸ್ವಗ್ರಾಮ ಹನಗೋಡಿಗೆ ಆಗಮಿಸಿದರು.

ಈ ವೇಳೆ ಅನಿಲ್‌ಕುಮಾರರನ್ನು ಗ್ರಾಮಸ್ಥರು  ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾಗತಿಸಿದರಲ್ಲದೆ, ಗ್ರಾಮ ಪಂಚಾಯ್ತಿ ಆವರಣದಲ್ಲಿ ಪೋಷಕರೊಂದಿಗೆ ಮೈಸೂರು ಪೇಠ ತೊಡಿಸಿ ಸನ್ಮಾನಿಸಿದರು. ಸ್ವಗ್ರಾಮಕ್ಕೆ ಯೋಧ ಅನಿಲ್ ಆಗಮಿಸಿದ ವೇಳೆ ಮಂಗಳವಾದ್ಯದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಗ್ರಾ.ಪಂ.ಆವರಣಕ್ಕೆ ಕರೆತಂದು, ನೆರೆದಿದ್ದವರಿಗೆ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಅನಿಲ್‌ಕುಮಾರ್ ಗ್ರಾಮಸ್ಥರು ನೀಡಿರುವ ಗೌರವ ಸ್ಮರಣೀಯ, ತಾವು ಸಿಕಂದರಾಬಾದ್, ಜಮ್ಮುಕಾಶ್ಮೀರದ ಪೂಂಚ್, ಶ್ರೀನಗರ, ರಾಂಚಿ, ರಾಜಸ್ತಾನದ ಅಲೇಜ್, ಅಸ್ಸಾಂನ ನಿಷಾವರಿ ಸೇರಿದಂತೆ ದೇಶದಾದ್ಯಂತ 17 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿರುವ ಆತ್ಮ ತೃಪ್ತಿ ಇದೆ. ಹಿಮ ಪ್ರದೇಶವಾದ ಸಿಯಾಚಿನ್‌ನಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವಾಗಿದೆ. ಯುವಕರು ದೇಶ ಭಕ್ತಿಯನ್ನಿಟ್ಟುಕೊಂಡು ಗಟ್ಟಿ ಮನಸ್ಸಿನ ಗುರಿ ಇಟ್ಟುಕೊಂಡಲ್ಲಿ ಮಾತ್ರ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ತಾ.ಪಂ.ಮಾಜಿ ಸದಸ್ಯ ಎಚ್.ಆರ್.ರಮೇಶ್, ದಾ.ರಾ.ಮಹೇಶ್, ಹನಗೋಡುನಟರಾಜ್ ಮುಖಂಡರಾದ ಹನಗೋಡುಮಂಜುನಾಥ್,  ನೇರಳಕುಪ್ಪೆ ಮಹದೇವ್, ಯೋಧನ ಸೇವೆಯನ್ನು ಸ್ಮರಿಸಿ ನಮ್ಮೂರಿನ ಹೆಮ್ಮೆಯ ಯವಕನಂತೆ ಮುಂದಿನ ದಿನಗಳಲ್ಲಿ ಗ್ರಾಮದ ಮತ್ತಷ್ಟು ಯುವಕರು ಸೇನೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕೆಂದು ಹೇಳಿದರು.

ಗ್ರಾ.ಪಂ.ಸದಸ್ಯರಾದ ಸಂತೋಷ್, ಶಿವಣ್ಣ, ಚನ್ನಯ್ಯ, ಈಶ್ವರ, ಪಿಡಿಓ ನಾಗೇಂದ್ರಕುಮಾರ್, ಮುಖಂಡರಾದ ನಾಗೇಗೌಡ, ನಾಗೇಶ್, ಗಿರಿಧರ್, ಪಾಪಣ್ಣ, ಶ್ರೀಧರ್, ದೀಪು, ಭರತ್ ಕುಮಾರ್, ಗುಂಡ, ಪ್ರಭಾಕರ್, ರಾಜಗೋಪಾಲ್, ರಾಜಣ್ಣ, ಆಶು, ಅಶ್ರಕ್, ಎಚ್.ಬಿ.ಸುರೇಶ್, ನಂದೀಶ್, ಪಾಂಡುಕುಮಾರ್, ಪ್ರದೀಪ್, ರಾಘವೇಂದ್ರ, ಮುಖ್ಯಪೇದೆ ನಾಗರಾಜ್ ಸೇರಿದಂತೆ ಅನೇಕರು ಈ ವೇಳೆ ಇದ್ದರು.

Leave a Reply

Your email address will not be published. Required fields are marked *