ಮೈಸೂರು: ಜೆಡಿಎಸ್ನಲ್ಲಿಯೇ ಇರಬೇಕಾ? ಕಾಂಗ್ರೆಸ್, ಬಿಜೆಪಿಗೆ ಹೋಗಬೇಕಾ ಎಂಬುದನ್ನು ಕ್ಷೇತ್ರದ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ವಿಜಯನಗರ 4ನೇ ಹಂತದಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 23 ತಿಂಗಳಿದ್ದು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇನೆ ಎಂದರಲ್ಲದೆ, ಈ ಹಿಂದೆ ಮತದಾರರ ಅಭಿಪ್ರಾಯ ಕೇಳದೇ ಬಿಜೆಪಿಗೆ ಹೋಗಿ ಸೋತಿದ್ದು ಮತ್ತೆ ಆ ತಪ್ಪು ಮಾಡುವುದಿಲ್ಲ ಎಂದರು.
ಯಾರನ್ನು ವಿಧಾನ ಸಭೆಗೆ ಅಥವಾ ಮನೆಗೆ ಕಳುಹಿಸಬೇಕು ಎಂಬುದನ್ನು ತೀರ್ಮಾನ ಮಾಡಲಿಕ್ಕೆ ಇನ್ನೂ ಎರಡು ವರ್ಷ ವಿದ್ದು ಅದನ್ನು ಮತದಾರರು ಮಾಡಲಿದ್ದಾರೆ. ಕ್ಷೇತ್ರದಲ್ಲಿ ಯಾರು ಜನ ಪರವಾಗಿ ಕೆಲಸ ಮಾಡುತ್ತಾರೆಯೋ ಅವರನ್ನು ಜನ ಆಯ್ಕೆ ಮಾಡುತ್ತಾರೆ. ಯಾವುದೇ ಪಕ್ಷ ಆಗಲಿ, ಯಾವುದೇ ವ್ಯಕ್ತಿಯಾಗಲೀ ಎಲ್ಲರೂ ಅವಲಂಬಿಸಿರುವುದು ಚುನಾವಣೆ, ಮತದಾರರು ಮತ್ತು ಫಲಿತಾಂಶವನ್ನು ಆಗಿರುವುದರಿಂದ ಎಲ್ಲವನ್ನು ಮತದಾರರು ನಿರ್ಧರಿಸುತ್ತಾರೆ ಎಂದರು.
ಪ್ರತಿಯೊಬ್ಬರಿಗೂ ಲಸಿಕೆ ಪಡೆಯಬೇಕೆಂಬ ಅರಿವುಂಟಾಗಿದೆ. ಕೋವಿಡ್ನಿಂದ ಪಾರಾಗಬೇಕೆಂದು ಲಸಿಕೆ ಪಡೆಯುತ್ತಿರುವುದು ಸಂತೋಷ ತಂದಿದೆ. ಕೊರೊನಾ ಮೊದಲನೇ ಅಲೆ ಬಂದ ಸಂದರ್ಭದಲ್ಲಿಯೇ ಎಚ್ಚೆತ್ತುಕೊಳ್ಳಬೇಕೆಂಬುದು ಅರಿವಾಗಿದೆ. ಈಗ ಪ್ರಧಾನಿ, ಮುಖ್ಯಮಂತ್ರಿ ಎಲ್ಲರಿಗೂ ಮನದಟ್ಟಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಂತು ಹೋಗಿದೆ. ಎಲ್ಲರೂ ಕಡೆ ಕೊರೊನಾ ಕಡೆ ಗಮನಹರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.