ನವದೆಹಲಿ: ವಿಪಕ್ಷಗಳ ವಿರೋಧ ನಡುವೆ ರಾಜ್ಯಸಭೆಯಲ್ಲಿ ಕೃಷಿಗೆ ಸಂಬಂಧಿಸಿದ ಎರಡು ಮಸೂದೆಗಳು ಪಾಸ್ ಆಗಿದೆ.
ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020ಕ್ಕೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಸದಸ್ಯರು ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೂ ಧ್ವನಿ ಮತದ ಮೂಲಕ ಕೇಂದ್ರದ ಕೃಷಿ ಮಸೂದೆಗಳ ಅಂಗೀಕರಿಸಬೇಕು ಎಂದು ಸೂಚಿಸಿದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ವಿರುದ್ಧ ಪ್ರತಿ ಪಕ್ಷಗಳು ಭಾನುವಾರ ಅವಿಶ್ವಾಸ ನಿರ್ಣಯ ಮಂಡಿಸಿವೆ.
ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿ ಪಕ್ಷಗಳು ಸದನದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಈ ವೇಳೆ ತೃಣಮೂಲ ಕಾಂಗ್ರೆಸ್ನ ಸಂಸದ ಡೆರೆಕ್ ಆಬ್ರಿಯನ್ ಸದನದ ಬಾವಿಗಿಳಿದು ಮಸೂದೆಯ ಪ್ರತಿಗಳನ್ನು ಉಪಸಭಾಪತಿ ಅವರ ಮುಂದೆ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಮಸೂದೆಗಳನ್ನು ನಿರ್ಬಂಧಿಸಲು ಸದಸ್ಯ ಬಲದ ಸಂಖ್ಯೆಗಳ ಕೊರತೆಯಿರುವ ಪ್ರತಿಪಕ್ಷಗಳು ಹೆಚ್ಚಿನ ಚರ್ಚೆಗಾಗಿ ಮಸೂದೆಗಳನ್ನು ಆಯ್ಕೆ ಸಮಿತಿಗೆ ನೀಡಬೇಕೆಂದು ಒತ್ತಾಯಿಸಿದ್ದವು.
ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಮಸೂದೆಗಳನ್ನು ಅಂಗೀಕರಿಸಬೇಕು ಎಂದು ಉಪಸಭಾಪತಿ ಹರಿವಂಶ್ ಸೂಚಿಸಿದ್ದರಿಂದ ಆಕ್ರೋಶಗೊಂಡ ವಿರೋಧ ಪಕ್ಷಗಳು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.